ಸೂರ್ಯಗಗನ I ಗೋಪಾಳದ ಡಿವಿಜಿ ವೃತ್ತದಲ್ಲಿರುವ ಗ್ರಾಮಠಾಣಾ ಭೂಮಿ ಕಬಳಿಕೆ I ವಶಪಡಿಸಿಕೊಂಡು ಸಮುದಾಯ ಭವನ ನಿರ್ಮಾಣ ಮಾಡಲು I ಲೀಸ್ ಬೇಸ್ ನಲ್ಲಿ ಮಂಜೂರಾತಿಗೆ ಕುಳುವ ಯುವ ಸೇನೆ ಆಗ್ರಹ I
ಸೂರ್ಯಗಗನ I ಗೋಪಾಳದ ಡಿವಿಜಿ ವೃತ್ತದಲ್ಲಿರುವ ಗ್ರಾಮಠಾಣಾ ಭೂಮಿ ಕಬಳಿಕೆ I ವಶಪಡಿಸಿಕೊಂಡು ಸಮುದಾಯ ಭವನ ನಿರ್ಮಾಣ ಮಾಡಲು I ಲೀಸ್ ಬೇಸ್ ನಲ್ಲಿ ಮಂಜೂರಾತಿಗೆ ಕುಳುವ ಯುವ ಸೇನೆ ಆಗ್ರಹ I
ಶಿವಮೊಗ್ಗ : ಗೋಪಾಳದ ಡಿವಿಜಿ ವೃತ್ತದಲ್ಲಿರುವ ಸರ್ವೇ ನಂಬರ್ ೧ ರಲ್ಲಿ ಗ್ರಾಮ ಠಾಣಾ ಜಮೀನು ೩೮.೦೦ ಗುಂಟೆ ಹಾಗೂ ಇದಕ್ಕೆ ಹೊಂದಿಕೊಂಡಂತೆ ಇರುವ ಸುಮಾರು ೪.೦೦ ಎಕರೆ ಸೆಟ್ಲೆಮೆಂಟ್ ಭೂ ಪ್ರದೇಶವನ್ನು ಕಬಳಿಸಲು ಮುಂದಾಗಿರುವ ಖಾಸಗಿ ವ್ಯಕ್ತಿಗಳ ಮೇಲೆ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಹಾಗೂ ಸದರಿ ಭೂ ಪ್ರದೇಶವನ್ನು ಜಿಲ್ಲಾಡಳಿತವು ವಶಪಡಿಸಿಕೊಂಡು ಕುಳುವ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣ ಮಾಡಲು ೯೦ ವರ್ಷದ ಅವಧಿಗೆ ಲೀಸ್ ಬೇಸ್ನಲ್ಲಿ ಮಂಜೂರು ಮಾಡಿಕೊಡಬೇಕೆಂದು ಕುಳುವ ಯುವ ಸೇನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಲಾಗಿದೆ
ಈ ಸಂದರ್ಭದಲ್ಲಿ ಮನವಿಯಲ್ಲಿ ವಿವರಿಸಿದಂತೆ ಕುಳುವ ಯುವ ಸೇನೆಯು ಈ ಭೂ ಪ್ರದೇಶವು ಶಿವಮೊಗ್ಗ ಪ್ರಸ್ತುತ ನಗರ ಹಾಗೂ ಅಂದಿನ ಗೋಪಾಳ ಗ್ರಾಮದ ಗಾಡಿಕೊಪ್ಪ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದ ಗ್ರಾಮದಲ್ಲಿನ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಾಗಿದ್ದ ಈ ಗ್ರಾಮ ಠಾಣಾ ಜಮೀನು ಇದೀಗ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿದ್ದ ಸದರಿ ಜಮೀನಿಗೆ ಪೋರ್ಜರಿ ದಾಖಲಾತಿಗಳನ್ನು ಸೃಷ್ಠಿಸಿ ಭೂ ಕಬಳಿಕೆಯಾಗಿದ್ದು ಸದರಿ ಜಮೀನು ಭೂ ಪ್ರದೇಶವನ್ನು ಶಿವಮೊಗ್ಗ ತಹಶಿಲ್ದಾರ್ ಹಾಗೂ ಡಿಡಿಎಲ್ಆರ್, ಎಡಿಎಲ್ಆರ್ರವರುಗಳು ಖುದ್ದು ಸ್ಥಳ ಗುರುತಿಸಿ ವಶಕ್ಕೆ ಪಡೆಯಲು ಜಿಲ್ಲಾಡಳಿತ ಈ ಕೂಡಲೇ ಆದೇಶಿಸಬೇಕು ಹಾಗೂ ಭೂ ಕಬಳಿಕೆಯ ಜಾಲದಲ್ಲಿದ್ದವರ ಮೇಲೆ ಗುಂಡಾಕಾಯ್ದೆಯಡಿ ಕೇಸು ದಾಖಲಿಸಿ, ನಕಲಿ ದಾಖಲೆಗಳ ಮೂಲಕ ಸಕ್ಷಮ ಪ್ರಾಧಿಕಾರಕ್ಕೆ ಹಾಗೂ ನ್ಯಾಯಾಲಯಕ್ಕೆ ವಂಚಿಸಿ ಭೂ ಕಬಳಿಕೆ ಮಾಡಲು ಶಾಮೀಲು ಆಗಿರುವ ತಾಲ್ಲೂಕ್ ಅಧಿಕಾರಿಗಳಾದ ಗ್ರಾಮ ಲೆಕ್ಕಿಗ, ರಜಸ್ವ ನೀರೀಕ್ಷಕ, ಸೇರಿದಂತೆ ಟಿಪ್ಪಣಿ ಹಾಗೂ ಮೂಲ ಗ್ರಾಮ ನಕ್ಷೆಯನ್ನು ಅನುಸರಿಸದೆ ಓರಲ್ ಭೂ ಸರ್ವೇ ನಕ್ಷೆ ತಯಾರಿಸಿ ಕೊಟ್ಟಿರುವ ಸರ್ವೇ ಅಧಿಕಾರಿಗಳನ್ನು ಈ ಕೂಡಲೇ ಅಮಾನತ್ತುಗೊಳಪಡಿಸಬೇಕು ಎಂದು ಕುಳುವ ಯುವ ಸೇನೆ ಆಗ್ರಹಿಸುತ್ತದೆ ಎಂದು ಹೇಳಿದ್ದಾರೆ
ಗ್ರಾಮ ಠಾಣಾ ಜಮೀನು ( ಇದೀಗಲೂ ಮೂಲ ಗ್ರಾಮ ನಕ್ಷೆನಲ್ಲಿ ನಮೂದಿಸಿರುವಂತೆ ಯಥಾಸ್ಥಿತಿ ಇರುವ ಸೆಟ್ಲೆಮೆಂಟ್ ಅಂದಾಜು ೪ ಎಕರೆ ಭೂ ಪ್ರದೇಶ ) ಭೂ ಕಬಳಿಕೆಯಾದಂತೆ ಇದಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ ೧ರಲ್ಲಿನ ೩೮.೦೦ ಗುಂಟೆ ಭೂ ಪ್ರದೇಶಕ್ಕೆ ನಕಲಿ ದಾಖಲೆಗಳನ್ನು ಸೃಷ್ಠಿಸಿ ಬೇಲಿ ಸುತ್ತಿಕೊಂಡಿರುವುದನ್ನು ಖಂಡಿಸಿ ತಮಗೆ ಈ ಮೂಲಕ ಒತ್ತಾಯಿಸಿ ಈ ಕೂಡಲೇ ಭೂ ಕಬಳಿಕೆದಾರರಿಂದ ವಶಕ್ಕೆ ಪಡೆದು ಕುಳುವ ಸಮುದಾಯಕ್ಕೆ ೯೦ ವರ್ಷದ ಅವಧಿಗೆ ಲೀಸ್ ಬೇಸ್ನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರು ಮಾಡುವಂತೆ ಕುಳುವ ಯುವಸೇನೆಯಿಂದ ಈ ಮನವಿ ನೀಡಲಾಗುತ್ತಿದೆ ಎಂದು ತಿಳಿಸಿದೆ.
ಕುಳುವ ಯುವಸೇನೆಯ ಲೋಕೇಶ್ರವರ ಈ ಪ್ರಸ್ತಾವನೆಯಲ್ಲಿ ಸಾಮಾಜಿಕ ನ್ಯಾಯವೂ ಇದಾಗಿದೆ, ಏಕೆಂದರೆ ಗೋಪಾಳದ ಕೊರಮ ಸಮುದಾಯದ ಸಂಖ್ಯೆ ಸಾವಿರಕ್ಕೂ ಹೆಚ್ಚಿದೆ, ಈ ಸಮುದಾಯದವರೇ ಕೃಷಿ ಮಾಡುತ್ತಿದ್ದ ಇಂದಿನ ಗೋಪಾಲಗೌಡ ಬಡಾವಣೆಯ ಹೆಚ್ಚಿನ ಭೂ ಪ್ರದೇಶಗಳನ್ನು ಅಕ್ಷರ ಜ್ಞಾನವಿಲ್ಲದೆ ಅಂದಿನ ಸೂಡಾ ವ್ಯಾಪ್ತಿಗೆ ಬಿಟ್ಟುಕೊಟ್ಟರೆ ಇನ್ನಲವರು ಬಿಡಿಗಾಸಿಗೆ ಮೋಸದಿಂದ ಖಾಸಗಿ ಒಡೆತನಕ್ಕೆ ಮಾಡಿಕೊಂಡರು, ಇನ್ನೂ ಸದರಿ ವ್ಯಾಪ್ತಿಯಲ್ಲಿನ ಭೂ ಪ್ರದೇಶಗಳ ಜಮೀನು ಪಹಣಿನಲ್ಲಿ ಕೆಲವರ ಹೆಸರು ಇನ್ನೂ ಅಳಿಸಲಾಗಿಲ್ಲ, ಒಂದೆಡೆ ಅಕ್ಷರಜ್ಞಾನದ ಕೊರತೆ, ಇನ್ನೊಂದೆಡೆ ಬಡತನ, ಕೃಷಿಗೂ ಬಿಡದ ದಲ್ಲಾಳಿಗಳ ಒಡೆತಕ್ಕೆ ಸಿಲುಕಿ ಬಿತ್ತುವ ಜಮೀನು ಕಳೆದುಕೊಂಡ ಈ ಸಮುದಾಯ ಇಂದಿಗೂ ತನ್ನ ವೃತ್ತಿ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ, ಇಂತಹದೊಂದು ವಾಸ್ತವ ಜಿಲ್ಲಾಡಳಿತ ಅರ್ಥಮಾಡಿಕೊಂಡು ಈ ಸಮುದಾಯ ಕೇಳಿದ ಬೇಡಿಕೆ ಈಡೇರಿಸುವ ಕೈಂಕರ್ಯಕ್ಕೆ ಮುಂದಾಗಬೇಕಿದೆ,
ವಾಸ್ತವವಾಗಿ ಶಿವಮೊಗ್ಗ ತಾಲ್ಲೂಕಿನ ಅಂದಿನ ಗೋಪಾಳ ಗ್ರಾಮದ ಗಾಡಿಕೊಪ್ಪ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದ ಒಟ್ಟು ಸುಮಾರು ಒಟ್ಟು ಐದು ಎಕರೆ ಗ್ರಾಮ ಠಾಣಾ ಜಮೀನು, ಸೆಟ್ಲಮೆಂಟ್ ಪ್ರದೇಶವು ಇದೀಗ ಪೋರ್ಜರಿ ದಾಖಲೆ ಹಾಗೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯಕ್ಕೆ ವಂಚಿಸಿ ಭೂ ಕಬಳಿಕೆ ಮಾಡಿಕೊಂಡಿದ್ದು ಸದರಿ ಅಧಿಕಾರದ ದುರುಪಯೋಗಕ್ಕೆ ತುತ್ತಾಗಿರುವ ಇಂತಹ ಮೀಸಲು ಭೂ ಪ್ರದೇಶಗಳು, ಅಕ್ರಮ ಖಾತೆಗಳಿಗೆ, ಭೂ ಸರ್ವೇ ಸ್ಕೆಚ್ಗಳಿಗೆ ಒಳಗಾಗುತ್ತಿರುವುದು ಅಲ್ಲದೆ ಡಿ-ನೋಟಿಫಿಕೇಶನ್ ಎನ್ನುವ ಜ್ವಲಂತ ಪಿಡುಗುಗಳಿಗೆ ಕಾರಣವಾಗುತ್ತಿರುವ ಗ್ರಾಮ ಲೆಕ್ಕಿಗ, ರಜಸ್ವ ನೀರೀಕ್ಷಕ, ಸರ್ವೇ ಅಧಿಕಾರಿಗಳನ್ನು ಈ ಕೂಡಲೇ ಅಮಾನತ್ತಿನಲ್ಲಿಟ್ಟು ಮೀಸಲು ಭೂ ಪ್ರದೇಶದಲ್ಲಿ ಅಕ್ರಮವಾಗಿ ಒಳ ಪ್ರವೇಶಿಸಿರುವವರ ಮೇಲೆ ಅಗತ್ಯ ಗುಂಡಾಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲು ಜಿಲ್ಲಾಡಳಿತ ಮುಂದಾಗಬೇಕಿದೆ ಎಂದು ಕುಳುವ ಯುವ ಸೇನೆ ಈ ಮೂಲಕ ಒತ್ತಾಯಿಸಿದೆ
ಒಂದು ವೇಳೆ ಜಿಲ್ಲಾಡಳಿತ ವಿಳಂಭನೀತಿ ಅನುಸುರಿಸಿದರೆ ಹೋರಾಟವು ತೀವ್ರಗೊಳಿಸಲು ಕುಳುವ ಯುವ ಸೇನೆ ಮುಂದಾಗುತ್ತದೆ, ಈಗಾಗಲೇ ಕ್ರಮ ಕೈಗೊಳ್ಳಿ ಎಂದು ಶಿವಮೊಗ್ಗ ತಹಶಿಲ್ದಾರ್, ಜಿಲ್ಲಾಡಳಿತಕ್ಕೆ, ಜಿಲ್ಲಾ ಪಂಚಾಯ್ತಿಗೆ, ಮುಖ್ಯಮಂತ್ರಿಗಳಿಗೆ, ಕಂದಾಯ ಸಚಿವರಿಗೆ, ಮನವಿ ನೀಡಲಾಗಿದ್ದರು ಇಂದಿಗೂ ಯಾವುದೇ ಪ್ರಕ್ರಿಯೇಗಳು ಮುಂದುವರೆಸಿರುವುದು ನ್ಯಾಯಯುತವಲ್ಲವಾಗಿದೆ, ಹೀಗಾಗಿ ಸಾವಿರಾರು ಕುಟುಂಬಗಳು ಇಲ್ಲಿಯೇ ಮೂರು ತಲೆಮಾರುಗಳಿಂದ ವಾಸವಾಗಿರುವ ಕೊರಮ ಸಮುದಾಯಕ್ಕೆ ಈ ಭೂ ಪ್ರದೇಶವನ್ನು ಲೀಸ್ ಬೇಸ್ನಲ್ಲಿ ಮಂಜೂರಾತಿ ಮಾಡಿ ಕೊಡಬೇಕೆಂದು ನಾವು ನಿಮ್ಮಗಳಿಗೆ ಈ ಪ್ರತಿಭಟನೆಯ ಮೂಲಕ ಮತ್ತೊಮ್ಮೆ ಮನವಿ ಸಲ್ಲಿಸುತ್ತಿದ್ದೇವೆ, ನೀವು ಭೂ ಕಬಳಿಕೆದಾರರ ಮೇಲೆ ಕ್ರಮ ಜರುಗಿಸಿ ಭೂ ಪ್ರದೇಶವನ್ನು ವಶಪಡಿಸಿಕೊಂಡು ಕುಳುವ ಯುವ ಸಮುದಾಯದ ಬೇಡಿಕೆಯನ್ನು ಈಡೇರಿಸಬೇಕೆಂದು ಸಾಂವಿಧಾನಿಕವಾಗಿ ಈ ಮನವಿಯನ್ನು ನೀಡುತ್ತಿದ್ದೇವೆ ಎಂದು ಜಿಲ್ಲಾಧ್ಯಕ್ಷರಾದ ಲೋಕೇಶ್ ಪೈಲ್ವಾನ್ ಸೇರಿದಂತೆ ಕುಳುವ ಯುವ ಸೇನೆಯ ಪದಾಧಿಕಾರಿಗಳು, ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಅಲ್ಲದೆ ಈ ಮನವಿಯನ್ನು ಗೌರವಾನ್ವಿತ ರಾಜ್ಯಪಾಲರು, ರಾಜಭವನ, ಬೆಂಗಳೂರು, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ, ವಿಧಾನಸೌದ, ಬೆಂಗಳೂರು, ಕಂದಾಯ ಸಚಿವರು, ಕರ್ನಾಟಕ ಸರ್ಕಾರ, ವಿಧಾನ ಸೌದ, ಬೆಂಗಳೂರು, ಉಪವಿಭಾಗಾಧಿಕಾರಿಗಳು, ಉಪವಿಭಾಗಾಧಿಕಾರಿಗಳವರ ಕಛೇರಿ ಶಿವಮೊಗ್ಗ, ತಹಶಿಲ್ದಾರ್, ತಾಲೂಕ್ ಕಚೇರಿ, ಶಿವಮೊಗ್ಗ ಇವರಿಗೂ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ.
Comments
Post a Comment